ಶಾಸಕರಾದ ಒಂದುವರೆ ವರ್ಷದ ಬಳಿಕ ಮೊದಲ ಪತ್ರಿಕಾಗೋಷ್ಠಿ, ತಾಲೂಕಿನ ಅಭಿವೃದ್ಧಿ, ನವ ದೊಡ್ಡಬಳ್ಳಾಪುರ ಕಲ್ಪನೆ, ವಿರೋಧ ಪಕ್ಷ ಮೈತ್ರಿ ಪಕ್ಷದ ಬಗ್ಗೆ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.....

 

ಶಾಸಕರಾದ ಒಂದುವರೆ ವರ್ಷದ ಬಳಿಕ ಮೊದಲ ಪತ್ರಿಕಾಗೋಷ್ಠಿ, ತಾಲೂಕಿನ ಅಭಿವೃದ್ಧಿ, ನವ ದೊಡ್ಡಬಳ್ಳಾಪುರ ಕಲ್ಪನೆ, ವಿರೋಧ ಪಕ್ಷ ಮೈತ್ರಿ ಪಕ್ಷದ ಬಗ್ಗೆ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.....



ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ನವ ದೊಡ್ಡಬಳ್ಳಾಪುರ ಕಲ್ಪನೆಗೆ ಈಗಾಗಲೇ  ಅಡಿಪಾಯ ಹಾಕಿದ್ದೇನೆ. ಮುಂಬರುವ ದಿನಗಳಲ್ಲಿ ನವ ದೊಡ್ಡಬಳ್ಳಾಪುರ ಕಲ್ಪನೆಗೆ ತಕ್ಕಂತೆ ಕಾರ್ಯವನ್ನು ಮಾಡುತ್ತಾ ಟೀಕೆ ಮಾಡುವ ಕೆಲವರಿಗೆ ನನ್ನ ಅಭಿವೃದ್ಧಿ ಕಾರ್ಯಗಳಿದ್ದಲೇ ಉತ್ತರಿಸುತ್ತೇನೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.


ನಗರದ ಅರ್ಕಾವತಿ ಬಡಾವಣೆಯಲ್ಲಿರುವ ಶಾಸಕರ ನಿವಾಸದಲ್ಲಿ ಶನಿವಾರ ನಡೆದ ತಾಲೂಕಿನ ಅಭಿವೃದ್ದಿ ಕಾರ್ಯಗಳ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.


ತಾಲೂಕಿನ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಮುಖ್ಯವಾಗಿ ತಾಲ್ಲೂಕಿನ ಭಕ್ತರಹಳ್ಳಿ, ದೊಡ್ಡ ತುಮಕೂರು, ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹೆಚ್ಚು ಒತ್ತು ನೀಡಲಾಗಿದೆ.‌ ಆರ್.ಡಿ.ಪಿ.ಆರ್ ಇಲಾಖೆಯೊಂದಿಗೆ ಚರ್ಚಿಸಿ ಟೆಂಡರ್ ಪಡೆಯುವ ಗುತ್ತಿಗೆದಾರರಿಗೆ ಸೂಕ್ತ ಷರತ್ತುಗಳೊಂದಿಗೆ ಕರ್ತವ್ಯ ನಿರ್ವಹಿಸುವಂತೆ  ತಿಳಿಸಲಾಗಿದೆ ಎಂದರು.

(ADD ಜಾಹೀರಾತು)

ಜಿಲ್ಲೆಯ ನರೇಗಾ ಕಾಮಗಾರಿ ಪ್ರಗತಿಯಲ್ಲಿ ತಾಲೂಕು ಮೊದಲನೇ ಸ್ಥಾನದಲ್ಲಿದೆ. ಪ್ರತಿ ಗ್ರಾಮದಲ್ಲಿ ಯೋಜನೆಯು ಸಮರ್ಪಕವಾಗಿ ಜನತೆಗೆ ತಲುಪಿದೆ. ಮುಂದೆ ಪ್ರತಿ ಪಂಚಾಯಿತಿಗೆ 3 ಕೋಟಿಗಳಷ್ಟು ಅನುದಾನದ ಕಾಮಗಾರಿ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದರು.


ಯಾವುದೇ ಕಾಮಗಾರಿ ಬದಲಿಸಿಲ್ಲ


ನಾನು ತಾಲೂಕಿನ ಶಾಸಕನಾಗಿ ಅಭಿವೃದ್ಧಿ ಕಾರ್ಯಗಳ ಕಡೆ ಗಮನ ಹರಿಸಿದ್ದೇನೆ, ಈ ಹಿಂದೆ ಮಾಡಿದ್ದ  ಕ್ರಿಯಾಯೋಜನೆಯನ್ನು ಯಥಾವತ್ತಾಗಿ ಕಾರ್ಯರೂಪಕ್ಕೆ ತರುತ್ತಿದ್ದು, ಯಾವುದೇ ಬದಲಾವಣೆ ಮಾಡಿಲ್ಲ. ನಾನು ದ್ವೇಷ ರಾಜಕಾರಣ ಮಾಡುವುದಿಲ್ಲ, ರಾಜಕೀಯ ಬದಲಾವಣೆಗಳಿಗೆ ಅವಕಾಶ ನೀಡಿಲ್ಲ. 2017ರಲ್ಲಿ ತಾಲ್ಲೂಕಿನಲ್ಲಿ ನಿರ್ಮಿಸಿರುವ ಒಳಚರಂಡಿಗಳು ಇಂದು ಕುಸಿಯುತ್ತಿವೆ, ಒಂದು ಒಳಚರಂಡಿ ಕನಿಷ್ಠ 30 ವರ್ಷ ಬಾಳಿಕೆ ಬರಬೇಕಿತ್ತು, ಆದರೆ, ಇಂದು ಒಳಚರಂಡಿ ಕುಸಿಯುತ್ತಿದೆ ಈ ಪ್ರಶ್ನೆಗೆ ಉತ್ತರವನ್ನು ಕಾಮಗಾರಿ ನಡೆಸಿದ ಗುತ್ತಿಗೆದಾರರೇ ನೀಡಬೇಕಿದೆ ಎಂದರು.


ನಗರಸಭೆಯಲ್ಲಿ ಆದಾಯಕ್ಕಿಂತ ವ್ಯಯ ಹೆಚ್ಚು 


ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 27ರಿಂದ 28 ಸಾವಿರ ಮನೆಗಳಿವೆ. ನಗರಸಭೆಯಲ್ಲಿ ಸರ್ಕಾರಿ ಅನುದಾನಗಳ ಕೊರತೆ ಇದೆ. ಪ್ರತಿ ತಿಂಗಳು ಸುಮಾರು 75 ಲಕ್ಷ ಆದಾಯವಿದೆ ಎಂದು ಭಾವಿಸಿದರೆ, ನಗರಸಭಾ ವ್ಯಾಪ್ತಿಯ ಜನತೆಗೆ ಸೌಕರ್ಯ ಕಲ್ಪಿಸಲು 1ಕೋಟಿ 40 ಲಕ್ಷದಷ್ಟು ಮೊತ್ತದ ಅವಶ್ಯಕತೆ ಇದೆ. ನಮ್ಮಲ್ಲಿ ಆದಾಯಕ್ಕಿಂತ ವ್ಯಯವೇ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ನಮ್ಮಲ್ಲಿ ಬರುವ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ. ನಗರ ಭಾಗದ ಒಳಚರಂಡಿ ನಿರ್ವಹಣೆಗೆ 136 ಕೋಟಿ ಮೊತ್ತದ ಅನುದಾನವನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದೇನೆ. ಈ ಕುರಿತು ಸದನದಲ್ಲಿ ಈಗಾಗಲೇ ಪ್ರಸ್ತಾಪಿಸಿದ್ದು, ಇಲಾಖೆ ಮತ್ತು ಸಚಿವರಿಗೆ ಮನವಿ ಕೂಡ ಸಲ್ಲಿಸಲಾಗಿದೆ ಎಂದರು.


ತಾಲೂಕಿನ ಜನತೆಯ ಆರೋಗ್ಯಕ್ಕೆ ಹೆಚ್ಚಿನ ಒತ್ತು  


ತಾಲ್ಲೂಕಿನ ಜನತೆಯ ಅರೋಗ್ಯ ದೃಷ್ಟಿಯಿಂದ ಜಿಲ್ಲಾಸ್ಪತ್ರೆಗಾಗಿ ಸಿದ್ದೇನಾಯಕನ ಹಳ್ಳಿಯಲ್ಲಿ 9 ಎಕ್ಕರೆ ಪ್ರದೇಶದಲ್ಲಿ ಸುಮಾರು 22 ಕೋಟಿ ವೆಚ್ಚದಲ್ಲಿ 50 ಬೆಡ್ ಗಳ ವ್ಯವಸ್ಥೆ ಇರುವ ಕ್ರಿಟಿಕಲ್ ಕೇರ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಈ ಹಿಂದೆ ನಮ್ಮ ತಾಲೂಕಿಗೆ ನೀಡಲಾಗಿದ್ದ ಜಿಲ್ಲಾಸ್ಪತ್ರೆಯನ್ನು ದೇವನಹಳ್ಳಿಗೆ  ಸ್ಥಳಾಂತರಿಸುವ ಹುನ್ನಾರ ನೆಡೆದಿತ್ತು. ಆದರೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದ ಹೋರಾಟ ಫಲವಾಗಿ ಜಿಲ್ಲಾಸ್ಪತ್ರೆ ನಮ್ಮಲ್ಲಿಯೇ ಉಳಿದಿದೆ 195 ಕೋಟಿ ವೆಚ್ಚದಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣವಾಗಲಿದೆ ಎಂದರು.


ಪ್ರಸ್ತುತ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಹೆಚ್ಚಾಗಿ ಕಾಣುತ್ತಿದೆ. ಈ ಕೊರತೆಯನ್ನು ನೀಗಿಸಲು 6 ಎಕರೆ ಪ್ರದೇಶದಲ್ಲಿ ನರ್ಸಿಂಗ್ ಕಾಲೇಜು ನಿರ್ಮಾಣಕ್ಕೆ ಪ್ರಸ್ತಾವನೆ ನೀಡಲಾಗಿದ್ದು, ಸಂಬಂಧಪಟ್ಟ ಇಲಾಖೆ ವತಿಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದರು.


ನೇಕಾರರ ಅಭಿವೃದ್ಧಿಗೆ ಶ್ರಮಿಸುವೆ


ನಮ್ಮ ತಾಲ್ಲೂಕು ನೇಕಾರಿಕೆಗೆ ಪ್ರಸಿದ್ದಿ ಪಡೆದಿದ್ದು, ನೇಕಾರರ ಅಭಿವೃದ್ಧಿ ನನ್ನ ಪ್ರಮುಖ ಉದ್ದೇಶ. ಈ ನಿಟ್ಟಿನಲ್ಲಿ ಪ್ರಾಥಮಿಕವಾಗಿ 75 ಕೊಟಿ ವೆಚ್ಚದಲ್ಲಿ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಅಂಡರ್ ಗ್ರೌಂಡ್ ಕರೆಂಟ್ ವ್ಯವಸ್ಥೆ ಕಾಮಗಾರಿಗೆ ಚಾಲನೆ ನೀಡುತ್ತಿದ್ದು, ನೇಕಾರರಿಗೆ ಮುಂದೆ ಇದೊಂದು ಉತ್ತಮ ಸೇವೆ ಸಲ್ಲಿಸುವ ಯೋಜನೆಯಾಗಲಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಗಮನ ಸೆಳೆಯಲು ಜವಳಿ ಉತ್ಸವ ಮಾಡಲು ನಿರ್ಧರಿಸಲಾಗಿದೆ ಎಂದರು.


ತಾಲೂಕಿನ ನೇಕಾರಿಕೆ ಉಳಿಸಲು ನೇಕಾರರ ಹಿತರಕ್ಷಣೆ ಕಾಪಾಡುವ ಸಲುವಾಗಿ ಪವರ್ ಲೂಮ್ ಪ್ರೊಟೆಕ್ಷನ್ ಆಕ್ಟ್ ಜಾರಿ ತರಲು ಚಿಂತನೆ ನಡೆಸುತ್ತಿದ್ದೇವೆ. ಈ ಆಕ್ಟ್ ಜಾರಿಗೊಳಿಸಿದರೆ ನೇಕಾರಿಕೆ ಹಾಗೂ ನೇಕಾರರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.


ವಿದ್ಯುತ್ ಚಿತಗಾರ ನಿರ್ಮಾಣ


ದೇವಾಂಗ ಮಂಡಳಿಗೆ ಧನ್ಯವಾದ ಅರ್ಪಿಸಿದ ಶಾಸಕರು. ಕೊರೋನ ಸಂದರ್ಭದಲ್ಲಿ ವಿದ್ಯುತ್ ಚಿತಾಗಾರದ ಸೇವೆ ಶ್ಲಾಘನಿಯ ದೇವಾಂಗ ಸಮುದಾಯದ ಸೇವೆ ತಾಲ್ಲೂಕಿನ ಜನತೆ ಮರೆಯಲು ಸಾಧ್ಯವಿಲ್ಲ. ಇಂದಿಗೂ ಮುಕ್ತಿದಾಮ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಇದಕ್ಕೆ ಪೂರಕವಾಗಿ ತಾಲ್ಲೂಕಿನ ಒಬದೇನಹಳ್ಳಿಯ ಸಮೀಪ 4 ಕೋಟಿ ವೆಚ್ಚದಲ್ಲಿ ವಿದ್ಯುತ್ ಚಿತಗಾರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.


ಪೈಪ್ ಲೈನ್ ಮೂಲಕ ದೊಡ್ಡತುಮಕೂರು, ಮಜರಾಹೊಸಹಳ್ಳಿ ಗ್ರಾಮಗಳಿಗೆ ನೀರು ಪೂರೈಕೆ 


ಕಳೆದ ಹಲವು ವರ್ಷಗಳಿಂದ ಶುದ್ಧ ಕುಡಿಯುವ ನೀರಿಗಾಗಿ ದೊಡ್ಡ ತುಮಕೂರು ಹಾಗೂ ಮಜರಾ ಹೊಸಹಳ್ಳಿ ಗ್ರಾಮ ಪಂಚಾಯತಿಯ ಗ್ರಾಮಸ್ಥರು ಹೋರಾಟ ನಡೆಸುತ್ತಿದ್ದಾರೆ, ಅವರ ಅನುಕೂಲಕ್ಕಾಗಿ 9.5 ಕೋಟಿ ವೆಚ್ಚದಲ್ಲಿ ಕಾಡನೂರು ಗ್ರಾಮದಿಂದ ಪೈಪ್ ಲೈನ್ ಗಳ ಮೂಲಕ ದೊಡ್ಡತುಮಕೂರು, ಮಜರಾ ಹೊಸಹಳ್ಳಿ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.


ಪ್ರತ್ಯೇಕ ಎಸಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ನಿರ್ಧಾರ


ತಾಲೂಕಿನಲ್ಲಿ ತಾಲೂಕು ಕಚೇರಿ ಸ್ಥಿತಿ ಅದೋಗತಿಗೆ ತಲುಪಿದೆ. ಸ್ವಚ್ಛತೆ ಮರೀಚೆಕೆಯಾಗಿದೆ. ತಾಲೂಕು ಕಚೇರಿಯಲ್ಲೇ ಉಪವಿಭಾಗಾಧಿಕಾರಿ ಕಚೇರಿ ಇದೆ. ವೃದ್ಧರು, ಅಂಗವಿಕಲರು, ಮಹಿಳೆಯರು ಮೆಟ್ಟಿಲೇರಿ ಕಚೇರಿಗೆ ತಲುಪಲು ಹರಸಾಹಸ ಪಡುತ್ತಿದ್ದಾರೆ. ಅದನ್ನು ತಪ್ಪಿಸಲು ಡಿವೈಎಸ್ ಪಿ ಕಚೇರಿ‌ ಪಕ್ಕದಲ್ಲಿ 25ಕೋಟಿ ವೆಚ್ಚದಲ್ಲಿ ಎಸಿ ಕಚೇರಿ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದರು.


ರಾಜ್ಯ ಸರ್ಕಾರದಡಿಯಲ್ಲಿ ಬರುವ 42 ಇಲಾಖೆಗಳ ಯೋಜನಾ ಸೌಲಭ್ಯಗಳನ್ನು ತಾಲೂಕಿನ ಜನತೆಗೆ ತರುವ ಪ್ರಯತ್ನ ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ನಾನು ಯಾವತ್ತೂ ಟೀಕೆ ಮಾಡಿಲ್ಲ. ಸುಃಖಾ ಸುಮ್ಮನೆ ಟೀಕೆ ಮಾಡುತ್ತಿದ್ದೇನೆ ಎಂದು ನನ್ನ ಮೇಲೆ ಆರೋಪ ಮಾಡುವ ಕೆಲಸ ಕೆಲವರು ಮಾಡುತ್ತಿದ್ದಾರೆ ಎಂದು ಹೇಳಿದರು.


ನಗರಸಭೆಯಲ್ಲಿರುವ ಕೆಲ ಕಾಂಗ್ರೆಸ್ ಸದಸ್ಯರು ನಗರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಅವರನ್ನು ಕೆಲವರು ದಿಕ್ಕು ತಪ್ಪಿಸುತ್ತಿದ್ದಾರೆ. ನಮ್ಮ ಪಕ್ಷದಿಂದ ಕಾಂಗ್ರೆಸ್ ಗೆ ಹೋಗಿದ್ದವರು ವಿಷ ಬೀಜ‌ಬಿತ್ತುತ್ತಿದ್ದಾರೆ. ಕಾಂಗ್ರೆಸ್ ನವರೆ ನಗರದ ಅಭಿವೃದ್ಧಿಗೆ ಅಡ್ಡಿಪಡಿಸಬೇಡಿ. ನಿಮ್ಮ ವಾರ್ಡ್ ನಲ್ಲಿರುವ ಅಲ್ಪಸಂಖ್ಯಾತರ ಬಗ್ಗೆ ಮೊದಲು ಚಿಂತನೆ ಮಾಡಿ ಎಂದರು.


ತಾಲೂಕಿನಲ್ಲಿ ಅಭಿವೃದ್ಧಿಯಾದರೇ ಶಾಸಕ ಧೀರಜ್ ಮುನಿರಾಜು ಅವರಿಗೆ ಹೆಸರು ಬರುತ್ತೆ ಎಂದು ಅಭಿವೃದ್ಧಿ ಮಾಡಲು ಕೆಲ ಕಾಣದ ಕೈಗಳು ಬಿಡುತ್ತಿಲ್ಲ ಎಂದು ಆರೋಪಿಸಿದರು.


ಈ ವೇಳೆ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯ ಬಂತಿ ವೆಂಕಟೇಶ್, ಗ್ರಾಮಾಂತರ  ಘಟಕ ಅಧ್ಯಕ್ಷ ನಾಗೇಶ್, ನಗರ ಘಟಕ ಅಧ್ಯಕ್ಷ ಮುದ್ದಪ್ಪ, ನಗರಸಭಾ ಸದಸ್ಯ ಪದ್ಮನಾಭ್  ಮುಖಂಡರಾದ ಮೋಹನ್, ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Comments